المنافقون
The Hypocrites • 11 ayahs • Medinan
بِسْمِ ٱللَّهِ ٱلرَّحْمَٰنِ ٱلرَّحِيمِ
1ಕಪಟವಿಶ್ವಾಸಿಗಳು ನಿಮ್ಮ ಬಳಿಗೆ ಬಂದರೆ, “ಖಂಡಿತವಾಗಿಯೂ ನೀವು ಅಲ್ಲಾಹನ ಸಂದೇಶವಾಹಕರಾಗಿದ್ದೀರಿ ಎಂದು ನಾವು ಸಾಕ್ಷಿ ನುಡಿಯುತ್ತೇವೆ” ಎಂದು ಹೇಳುತ್ತಾರೆ. ನೀವು ಅಲ್ಲಾಹನ ಸಂದೇಶವಾಹಕರು ಎಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ನಿಶ್ಚಯವಾಗಿಯೂ ಕಪಟವಿಶ್ವಾಸಿಗಳು ಸುಳ್ಳು ಹೇಳುವವರಾಗಿದ್ದಾರೆ ಎಂದು ಅಲ್ಲಾಹು ಸಾಕ್ಷಿ ನುಡಿಯುತ್ತಾನೆ.
2ಅವರು ತಮ್ಮ ಆಣೆಗಳನ್ನು ಗುರಾಣಿಯಾಗಿ ಮಾಡಿಕೊಂಡಿದ್ದಾರೆ. ಇದರ ಮೂಲಕ ಅವರು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಅವರು ಮಾಡುವ ಈ ಕೃತ್ಯವು ಬಹಳ ನಿಕೃಷ್ಟವಾಗಿದೆ.
3ಅದೇಕೆಂದರೆ, ಅವರು ಮೊದಲು ವಿಶ್ವಾಸವಿಟ್ಟು ನಂತರ ನಿಷೇಧಿಸಿದರು. ಆದ್ದರಿಂದ ಅವರ ಹೃದಯಗಳಿಗೆ ಮೊಹರು ಹಾಕಲಾಯಿತು. ಆದ್ದರಿಂದ ಅವರು (ಸತ್ಯವನ್ನು) ಅರ್ಥಮಾಡಿಕೊಳ್ಳುವುದಿಲ್ಲ.
4ನೀವು ಅವರನ್ನು ನೋಡಿದರೆ ಅವರ ಅಂಗಸೌಷ್ಟವವು ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಅವರು ಮಾತನಾಡ ತೊಡಗಿದರೆ ನೀವು ಅವರ ಮಾತನ್ನು ಕೇಳುವಿರಿ. ಅವರು ಗೋಡೆಗೆ ಒರಗಿ ನಿಲ್ಲಿಸಲಾದ ಮರದ ದಿಮ್ಮಿಗಳಂತೆ. ಪ್ರತಿಯೊಂದು ಶಬ್ದವನ್ನೂ ಅವರಿಗೆ ವಿರುದ್ಧವಾದುದೆಂದು ಅವರು ಭಾವಿಸುತ್ತಾರೆ. ಅವರೇ ನಿಜವಾದ ವೈರಿಗಳು. ಅವರ ಬಗ್ಗೆ ಜಾಗರೂಕರಾಗಿರಿ. ಅಲ್ಲಾಹು ಅವರನ್ನು ನಾಶ ಮಾಡಲಿ. ಅವರನ್ನು ಹೇಗೆ ತಪ್ಪಿಸಿಬಿಡಲಾಗುತ್ತಿದೆ?
5“ಬನ್ನಿ, ಅಲ್ಲಾಹನ ಸಂದೇಶವಾಹಕರು ನಿಮಗೋಸ್ಕರ ಅಲ್ಲಾಹನಲ್ಲಿ ಕ್ಷಮೆಯಾಚನೆ ಮಾಡುತ್ತಾರೆ” ಎಂದು ಅವರೊಡನೆ ಹೇಳಲಾದರೆ ಅವರು ತಲೆಯನ್ನು ಅಲ್ಲಾಡಿಸುತ್ತಾರೆ. ಅವರು ಅಹಂಕಾರ ತೋರುತ್ತಾ ನುಣುಚಿಕೊಳ್ಳುವುದು ನಿಮಗೆ ಕಾಣಬಹುದು.
6ನೀವು ಅವರಿಗೋಸ್ಕರ ಕ್ಷಮೆಯಾಚನೆ ಮಾಡಿದರೂ ಮಾಡದಿದ್ದರೂ ಅವರ ಮಟ್ಟಿಗೆ ಅದು ಸಮಾನವಾಗಿದೆ. ಅಲ್ಲಾಹು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನಿಶ್ಚಯವಾಗಿಯೂ ದುಷ್ಕರ್ಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
7ಅವರು ಯಾರೆಂದರೆ, “ಅಲ್ಲಾಹನ ಸಂದೇಶವಾಹಕರ ಬಳಿಯಿರುವವರಿಗೆ ಅವರು ಅಲ್ಲಿಂದ ಚದುರಿಹೋಗುವ ತನಕ ಖರ್ಚು ಮಾಡಬೇಡಿ” ಎಂದು ಹೇಳುವವರು.[1] ಭೂಮ್ಯಾಕಾಶಗಳ ಬೊಕ್ಕಸಗಳು ಅಲ್ಲಾಹನಿಗೆ ಸೇರಿದ್ದು. ಆದರೆ ಕಪಟವಿಶ್ವಾಸಿಗಳು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.
8ಅವರು ಹೇಳುತ್ತಾರೆ: “ನಾವು ಮದೀನಕ್ಕೆ ಮರಳಿದರೆ ಪ್ರತಿಷ್ಠೆಯುಳ್ಳವರು ದೀನರನ್ನು ಅಲ್ಲಿಂದ ಹೊರಗಟ್ಟುವರು.”[1] ಪ್ರತಿಷ್ಠೆಯಿರುವುದು ಅಲ್ಲಾಹನಿಗೆ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ. ಆದರೆ ಕಪಟವಿಶ್ವಾಸಿಗಳು ಅದನ್ನು ತಿಳಿಯುವುದಿಲ್ಲ.
9ಓ ಸತ್ಯವಿಶ್ವಾಸಿಗಳೇ! ನಿಮ್ಮ ಆಸ್ತಿ ಮತ್ತು ಮಕ್ಕಳು ಅಲ್ಲಾಹನ ಸ್ಮರಣೆಯನ್ನು ನಿರ್ಲಕ್ಷಿಸುವಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ಯಾರು ಹಾಗೆ ಮಾಡುತ್ತಾರೋ ಅವರೇ ನಷ್ಟ ಹೊಂದಿದವರು.
10ನಿಮ್ಮಲ್ಲೊಬ್ಬರಿಗೆ ಮರಣವು ಆಸನ್ನವಾಗಿ, “ನನ್ನ ಪರಿಪಾಲಕನೇ! ನನಗೆ ಸ್ವಲ್ಪ ಕಾಲಾವಕಾಶವನ್ನು ಕೊಟ್ಟರೆ ನಾನು ದಾನಧರ್ಮ ಮಾಡುತ್ತೇನೆ ಮತ್ತು ನೀತಿವಂತರಲ್ಲಿ ಸೇರಿಕೊಳ್ಳುತ್ತೇನೆ” ಎಂದು ಹೇಳುವಂತಾಗುವುದಕ್ಕೆ ಮೊದಲು ನಾವು ನಿಮಗೆ ಒದಗಿಸಿದ ಸಂಪತ್ತಿನಿಂದ (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿರಿ.
11ಒಬ್ಬ ವ್ಯಕ್ತಿಯ ನಿಶ್ಚಿತ ಅವಧಿಯು ಬಂದು ಬಿಟ್ಟರೆ, ನಂತರ ಅಲ್ಲಾಹು ಅವನಿಗೆ ಕಾಲಾವಕಾಶ ನೀಡುವುದೇ ಇಲ್ಲ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.