الجن
The Jinn • 28 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1(ಪ್ರವಾದಿಯವರೇ) ಹೇಳಿರಿ: ನಿಶ್ಚಯವಾಗಿಯೂ ಜಿನ್ನ್ಗಳಲ್ಲಿ ಸೇರಿದ ಒಂದು ಗುಂಪು (ಕುರ್ಆನನ್ನು) ಕಿವಿಗೊಟ್ಟು ಕೇಳಿದರೆಂದು ನನಗೆ ದಿವ್ಯವಾಣಿ ನೀಡಲಾಗಿದೆ. ನಂತರ ಅವರು ಹೇಳಿದರು: “ನಿಶ್ಚಯವಾಗಿಯೂ ನಾವು ಅದ್ಭುತವಾದ ಕುರ್ಆನನ್ನು ಕೇಳಿದೆವು.
2ಅದು ಸನ್ಮಾರ್ಗಕ್ಕೆ ದಾರಿ ತೋರಿಸುತ್ತದೆ. ಆದ್ದರಿಂದ ನಾವು ಅದರಲ್ಲಿ ವಿಶ್ವಾಸವಿಟ್ಟೆವು. ನಾವು ನಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಯಾರನ್ನೂ ಎಂದಿಗೂ ಸಹಭಾಗಿಯಾಗಿ ಮಾಡುವುದಿಲ್ಲ.
3ನಿಶ್ಚಯವಾಗಿಯೂ ನಮ್ಮ ಪರಿಪಾಲಕನ (ಅಲ್ಲಾಹನ) ಮಹಿಮೆಯು ಸರ್ವೋನ್ನತವಾಗಿದೆ. ಅವನು ಯಾರನ್ನೂ ತನ್ನ ಮಡದಿ-ಮಕ್ಕಳಾಗಿ ಮಾಡಿಕೊಂಡಿಲ್ಲ.
4ನಮ್ಮಲ್ಲಿನ ಒಬ್ಬ ಅವಿವೇಕಿಯು (ಇಬ್ಲೀಸ್) ಅಲ್ಲಾಹನ ಬಗ್ಗೆ ಸತ್ಯಕ್ಕೆ ವಿರುದ್ಧವಾದ ಮಾತನ್ನು ಹೇಳುತ್ತಿದ್ದನು.
5ಮನುಷ್ಯರು ಮತ್ತು ಜಿನ್ನ್ಗಳು ಅಲ್ಲಾಹನ ಬಗ್ಗೆ ಎಂದೂ ಸುಳ್ಳು ಹೇಳುವುದು ಸಾಧ್ಯವಿಲ್ಲವೆಂದು ನಾವು ಭಾವಿಸಿದ್ದೆವು.
6ಮನುಷ್ಯರಲ್ಲಿ ಕೆಲವರು ಕೆಲವು ಜಿನ್ನ್ಗಳೊಡನೆ ಅಭಯ ಕೋರುತ್ತಿದ್ದರು. ಇದರಿಂದ ಅವರು (ಜಿನ್ನ್ಗಳು) ತಮ್ಮ ಅತಿರೇಕವನ್ನು ಹೆಚ್ಚಿಸಿಕೊಂಡರು.
7ಅಲ್ಲಾಹು ಯಾರನ್ನೂ ಪುನಃ ಜೀವ ನೀಡಿ ಎಬ್ಬಿಸುವುದಿಲ್ಲವೆಂದು ನೀವು ಭಾವಿಸಿದಂತೆಯೇ ಮನುಷ್ಯರೂ ಭಾವಿಸಿದ್ದರು.
8ನಾವು ಆಕಾಶವನ್ನು ಮುಟ್ಟಿದೆವು. ಆಗ ಅದು ಪ್ರಬಲ ಕಾವಲುಗಾರರು ಮತ್ತು ಅಗ್ನಿಜ್ವಾಲೆಗಳಿಂದ ತುಂಬಿದ್ದಾಗಿ ಕಂಡೆವು.
9ನಾವು ಇದಕ್ಕಿಂತ ಮೊದಲು (ಆಕಾಶಲೋಕದ) ಮಾತುಗಳಿಗೆ ಕಿವಿಗೊಡಲು ಆಕಾಶದ ವಿವಿಧ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಯಾರಾದರೂ ಕಿವಿಗೊಟ್ಟು ಕೇಳಿದರೆ, ಅವನಿಗೋಸ್ಕರ ಹೊಂಚು ಹಾಕುತ್ತಿರುವ ಒಂದು ಅಗ್ನಿಜ್ವಾಲೆಯನ್ನು ಕಾಣುವನು.
10ಭೂಮಿಯಲ್ಲಿರುವವರಿಗೆ ಕೆಡುಕನ್ನು ಉದ್ದೇಶಿಸಲಾಗಿದೆಯೋ, ಅಥವಾ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಒಳಿತನ್ನು ಉದ್ದೇಶಿಸಿದ್ದಾನೋ ಎಂದು ನಮಗೆ ತಿಳಿದಿಲ್ಲ.
11ನಮ್ಮಲ್ಲಿ ನೀತಿವಂತರಿದ್ದಾರೆ ಮತ್ತು ನಮ್ಮಲ್ಲಿ ಅದಕ್ಕೆ ಹೊರತಾದವರೂ ಇದ್ದಾರೆ. ನಾವು ಹಲವಾರು ಭಿನ್ನ ಮಾರ್ಗಗಳಲ್ಲಿ ಹಂಚಿ ಹೋಗಿದ್ದೇವೆ.
12ಭೂಮಿಯಲ್ಲಿ ಎಂದಿಗೂ ಅಲ್ಲಾಹನನ್ನು ಅಸಮರ್ಥಗೊಳಿಸಲು ಸಾಧ್ಯವಿಲ್ಲ ಮತ್ತು ಪಲಾಯನ ಮಾಡುವ ಮೂಲಕವೂ ಅವನನ್ನು ಸೋಲಿಸಲು ಸಾಧ್ಯವಿಲ್ಲವೆಂದು ನಮಗೆ ಖಾತ್ರಿಯಾಗಿದೆ.
13ನಾವು ಸನ್ಮಾರ್ಗವನ್ನು (ಕುರ್ಆನನ್ನು) ಆಲಿಸಿದಾಗ ಅದರಲ್ಲಿ ವಿಶ್ವಾಸವಿಟ್ಟೆವು. ಯಾರು ತನ್ನ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡುತ್ತಾನೋ ಅವನು ನಷ್ಟವನ್ನು ಅಥವಾ ಅನ್ಯಾಯವನ್ನು ಭಯಪಡಬೇಕಾಗಿಲ್ಲ.
14ನಮ್ಮಲ್ಲಿ ಮುಸ್ಲಿಮರಿದ್ದಾರೆ ಮತ್ತು ನಮ್ಮಲ್ಲಿ ಅನ್ಯಾಯ ಮಾಡುವವರೂ ಇದ್ದಾರೆ. ಯಾರು ಮುಸ್ಲಿಮನಾದನೋ ಅವನು ಸನ್ಮಾರ್ಗವನ್ನು ಗುರಿಯಾಗಿಸಿಕೊಂಡನು.
15ಆದರೆ ಅನ್ಯಾಯ ಮಾಡಿದವರು ಯಾರೋ ಅವರು ನರಕಕ್ಕೆ ಸೌದೆಯಾಗುವರು.
16ಜನರು ನೇರಮಾರ್ಗದಲ್ಲಿ ದೃಢವಾಗಿ ನಿಂತರೆ, ನಾವು ಅವರಿಗೆ ಹೇರಳವಾಗಿ ನೀರನ್ನು ಕುಡಿಯಲು ಕೊಡುತ್ತಿದ್ದೆವು.
17ಅದರ ಮೂಲಕ ಅವರನ್ನು ಪರೀಕ್ಷಿಸುವುದಕ್ಕಾಗಿ. ಯಾರು ತನ್ನ ಪರಿಪಾಲಕನ (ಅಲ್ಲಾಹನ) ಸ್ಮರಣೆಯಿಂದ ವಿಮುಖನಾಗುತ್ತಾನೋ ಅವನಿಗೆ ಅಲ್ಲಾಹು ಅತಿಕಠೋರ ಶಿಕ್ಷೆಯನ್ನು ನೀಡುವನು.
18ಮಸೀದಿಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ.
19ಅಲ್ಲಾಹನ ದಾಸನು (ಪ್ರವಾದಿ) ಅಲ್ಲಾಹನೊಡನೆ ಪ್ರಾರ್ಥಿಸಲು ನಿಂತಾಗ ಅವರು (ಜಿನ್ನ್ಗಳು) ಇನ್ನೇನು ಗುಂಪು ಗುಂಪಾಗಿ ಅವರ ಮೇಲೆ ಮುಗಿಬೀಳುವಂತಿದ್ದರು.”
20ಹೇಳಿರಿ: “ನಾನು ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಾತ್ರ ಕರೆದು ಪ್ರಾರ್ಥಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.”
21ಹೇಳಿರಿ: “ನಿಮಗೆ ಯಾವುದೇ ತೊಂದರೆ ಅಥವಾ ಉಪಕಾರ ಮಾಡುವುದು ನನ್ನ ಅಧೀನದಲ್ಲಿಲ್ಲ.”
22ಹೇಳಿರಿ: “ನಿಶ್ಚಯವಾಗಿಯೂ ನನ್ನನ್ನು ಯಾರೂ ಎಂದಿಗೂ ಅಲ್ಲಾಹನಿಂದ ರಕ್ಷಿಸಲಾರರು. ನಾನು ಅವನ ಹೊರತು ಎಲ್ಲಿಯೂ ಆಶ್ರಯವನ್ನು ಪಡೆಯಲಾರೆ.
23ಅಲ್ಲಾಹನ ವಚನಗಳು ಮತ್ತು ಅವನ ಸಂದೇಶಗಳನ್ನು (ಜನರಿಗೆ) ತಲುಪಿಸುವುದು ಮಾತ್ರ ನನ್ನ ಕರ್ತವ್ಯವಾಗಿದೆ.” ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯತೆ ತೋರುತ್ತಾನೋ ನಿಶ್ಚಯವಾಗಿಯೂ ಅವನಿಗೆ ನರಕಾಗ್ನಿಯಿದೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
24ಎಲ್ಲಿಯವರೆಗೆಂದರೆ, ಅವರಿಗೆ ವಾಗ್ದಾನ ಮಾಡಲಾಗುವುದನ್ನು ಅವರು ಕಣ್ಣಾರೆ ನೋಡುವ ತನಕ (ಅವರ ಸತ್ಯವನ್ನು ಅಂಗೀಕರಿಸುವುದಿಲ್ಲ). ಆಗ ಅವರು ತಿಳಿದುಕೊಳ್ಳುವರು—ಯಾರ ಸಹಾಯಕ ಅತ್ಯಂತ ದುರ್ಬಲ ಮತ್ತು ಯಾರು ಅತಿ ಕಡಿಮೆ ಸಂಖ್ಯೆಯವರು ಎಂದು.
25ಹೇಳಿರಿ: “ನಿಮಗೆ ವಾಗ್ದಾನ ಮಾಡಲಾಗುತ್ತಿರುವುದು ಹತ್ತಿರದಲ್ಲಿದೆಯೋ ಅಥವಾ ನನ್ನ ಪರಿಪಾಲಕನು (ಅಲ್ಲಾಹು) ಅದಕ್ಕೆ ದೂರದ ಒಂದು ಅವಧಿಯನ್ನು ನಿಶ್ಚಯಿಸುವನೋ ಎಂದು ನನಗೆ ತಿಳಿದಿಲ್ಲ.”
26ಅವನು ಅದೃಶ್ಯವನ್ನು ತಿಳಿದವನು. ಅವನು ತನ್ನ ಅದೃಶ್ಯವನ್ನು ಯಾರಿಗೂ ಪ್ರಕಟಗೊಳಿಸುವುದಿಲ್ಲ.
27ಅವನು ಇಷ್ಟಪಡುವ ಸಂದೇಶವಾಹಕರಿಗೆ ಹೊರತು. ಆಗಲೂ ಅವನು ಆ ಸಂದೇಶವಾಹಕರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪಹರೆಗಾರರನ್ನು ನಿಶ್ಚಯಿಸುವನು.
28ಅವರು (ಸಂದೇಶವಾಹಕರು) ಅವರ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ತಲುಪಿಸಿದ್ದಾರೆಂದು ಪ್ರವಾದಿಯವರು ತಿಳಿಯುವುದಕ್ಕಾಗಿ. ಅವನು ಅವರ ಬಳಿಯಿರುವುದನ್ನು ಆವರಿಸಿಕೊಂಡಿದ್ದಾನೆ ಮತ್ತು ಎಲ್ಲಾ ವಸ್ತುಗಳನ್ನು ಸರಿಯಾಗಿ ಎಣಿಸಿಟ್ಟಿದ್ದಾನೆ.